Saturday, January 24, 2009

ತಿಳಿಯದೇ ತುಳಿದ ಕಾಲುದಾರಿ

ಇಂಗ್ಲಿಷ್ ಕತೆಯೊಂದರ ಆಧಾರಿತ
ಲೇಖನ: ಪದ್ಮಿನಿ


ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿ ಶಾಸ್ತ್ರಿಗಳಿಗೆ ದೊಡ್ಡ ದಕ್ಷಿಣೆ ಕೊಟ್ಟು ಮನೆಗೆ ಹಿಂತಿರುಗುತ್ತಿದ್ದ ದಂಪತಿಗಳ ಮುಖದಲ್ಲಿ ಮಂದಹಾಸವಿರಲಿಲ್ಲ. ದಾರಿಯುದ್ದಕ್ಕೂ ಮೌನ. ತನ್ನ ಸೌಂದರ್ಯವನ್ನು ಕದ್ದು ನೋಡುತ್ತಿದ್ದ ದಾರಿಹೋಕರ ಕಡೆಗೆ ಶರದಾ ಗಮನ ಕೊಡಲಿಲ್ಲ. ಮದುವೆಗೆ ಮುಂಚೆ ಅದೆಲ್ಲ ಹಿತವಾಗಿತ್ತು. ತನ್ನತ್ತ ಆಸೆಗಣ್ಣಿನಿಂದ ನೋಡುವ ಆ ಹುಡುಗರು, ಗಂಡಸರು ಅವಳಲ್ಲಿ ಉತ್ಸಾಹ ತುಂಬುತ್ತಿದ್ದರು. ಮದುವೆಯಾದರೂ ಅವಳ ಸೌಂದರ್ಯ ಒಂದಂಶವೂ ಕಡಿಮೆಯಾಗಿರಲಿಲ್ಲ. ಅಂದೆಲ್ಲ ಶಾರದಾಳಿಗೆ ತನ್ನ ಬೊಂಬೆಯಂತಹ ದೇಹದ ಬಗ್ಗೆ ತುಂಬಾ ಹೆಮ್ಮೆಯಿತ್ತು. ಆಸೆ ಹುಟ್ಟಿಸುವಂತಿದ್ದ ಅವಳ ಮುಖವನ್ನು ನೋಡಲು ನೆರೆಹೊರೆಯ ಗಂಡಸರು ಕಾಯುತ್ತಿದ್ದರು. ಅವಳು ಯಾವಾಗ ಗಿಡಗಳಿಗೆ ನೀರು ಹಾಕಲು ಹೊರಬರುತ್ತಾಳೆ, ಯಾವಗ ಪೇಟೆಗೆ ಹೋಗುತ್ತಾಳೆ, ಯಾವಾಗ ದೇವಸ್ಥಾನಕ್ಕೆ ಹೋಗುತ್ತಾಳೆ ಅದೆಲ್ಲ ಅವರಿಗೆ ಗೊತ್ತಾಗಿತ್ತು. ಎಲ್ಲರ ಗಮನ ತನ್ನೆಡೆಗೆ ಇರುತ್ತಿದ್ದರೆ ಅದನ್ನು ಅವಳು ರಹಸ್ಯವಾಗಿ ಇಷ್ಟಪಡುತ್ತಿದ್ದಳು. ಆದರೆ ಸಂಪ್ರದಾಯಸ್ಥ ಅತ್ತೆ-ಮಾವಂದಿರು ಸಂಶಯಪಡಬಹುದೆಂದು ಎಂದಿಗೂ ಯಾವ ಗಂಡಸನ್ನೂ ಅವಳು ಮಾತನಾಡಿಸುತ್ತಿರಲಿಲ್ಲ.

ಅವಳ ಇತ್ತೀಚಿನ ಮನಸ್ಥಿತಿ ಮಾತ್ರ ಮರುಕ ಹುಟ್ಟಿಸುವಂತಿತ್ತು. ಮದುವೆಯಾಗಿ ಎರಡು ವರ್ಷಗಳಾದರೂ ಅವಳು ತಾಯಿಯಾಗಿರಲಿಲ್ಲ. ಇಂದು ಅವಳ ಇಪ್ಪತ್ತೈದನೆಯ ಜನ್ಮದಿನವಾದ್ದರಿಂದ ಗಂಡನೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವತೆಗೆ ಹೂವು, ಪೂಜೆ ಸಲ್ಲಿಸಿದ್ದಳು. ನಮ್ಮ ದೇಶದಲ್ಲಿ ತಂತ್ರಜ್ಞಾನ ಮನೆಮನೆಗೂ ಕಾಲಿಟ್ಟಿರೂ, ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದರೂ ನಮ್ಮ ಗೊಡ್ಡು ಸಂಪ್ರದಾಯಗಳು ಮತ್ತು ವಿಚಾರಗಳು ಇನ್ನೂ ಹಾಗೆಯೇ ಇವೆ ಎಂಬುದಕ್ಕೆ ಶಾರದಾಳ ಪರಿಸ್ಥಿತಿ ಉದಾಹರಣೆಯಾಗಿತ್ತು. ಗರ್ಭ ಧರಿಸದಿದ್ದರೆ ಎಲ್ಲರೂ ಹೆಣ್ಣನ್ನೇ ದೂರಲು ಮುಂದಾಗುತ್ತಾರೆ. ಅವಳಿಗೆ ಬಂಜೆಯ ಪಟ್ಟ ಕಟ್ಟಿಬಿಡುತ್ತಾರೆ. ಅದು ಅವಳು ಮನೆಗೆ ತಂದ ಶಾಪವೆಂದೂ ಭಾವಿಸುತ್ತಾರೆ. ಶಾರದಾಳ ಗಂಡನೇನೂ ಅವಳೊಂದಿಗೆ ಕಟುವಾಗಿ ವರ್ತಿಸಿರಲಿಲ್ಲ. ಆದರೆ ಅವಳಿಗೆ ತನ್ನ ಗಂಡನ ಮನೆಯಲ್ಲಿ ಬದಲಾಗಿದ್ದ ಜನರ ವರ್ತನೆಯ ಅರಿವಾಗುತ್ತಿತ್ತು. ಅವರಿವರು ಆಡುತ್ತಿದ್ದ ಸಲ್ಲದ ಮಾತುಗಳನ್ನು ಕೇಳಿ ಅವಳ ಮನಸ್ಸು ನೋಯುತ್ತಿತ್ತು. ಬಂಜೆತನದ ಕಳಂಕವನ್ನು ಹೊರುವುದೆಂದರೆ ಹೆಣ್ಣಿಗೆ ದುಃಸ್ವಪ್ನವೊಂದು ನಿಜವಾದಂತಿರುತ್ತದೆ. ಆ ಕಳಂಕವನ್ನು ಹೊತ್ತ ಯಾವ ಹೆಣ್ಣೂ ತತ್ತರಿಸದೇ ಇರಲಾರಳು.

ಶಾರದಾಳಿಗೆ ಇದ್ದ ಒಂದೇ ಸಮಾಧಾನವೆಂದರೆ ನಗರದ ದೂರದ ಮೂಲೆಯಲ್ಲಿ ವಾಸವಾಗಿದ್ದ ಅವಳ ಗೆಳತಿ ಗಾಯತ್ರಿ. ಆ ಗೆಳತಿಯೊಂದಿಗೆ ಕಳೆಯುತ್ತಿದ್ದ ಕೆಲವು ಕ್ಷಣಗಳು ಶಾರದಾಳಿಗೆ ಅಪ್ಯಾಯಮಾನವಾಗಿದ್ದವು. ಆ ಕೆಲವು ಕ್ಷಣಗಳನ್ನು ಬಿಟ್ಟರೆ ಬೇರೆ ಯಾವ ಸಮಯದಲ್ಲೂ ತನ್ನ ನೋವನ್ನು ಮರೆತು ನಗುವುದಾಗಲೀ, ಹರಟೆಹೊಡೆಯುವುದಾಗಲೀ ಶಾರದಾಳಿಗೆ ಅಸಾಧ್ಯವಾಗಿತ್ತು. ಹಾಗಿರಬೇಕಾದರೆ ಒಂದು ದಿನ ಶಾರದಾಳಿಗೆ ಗಾಯತ್ರಿಯ ಮನೆಯಲ್ಲಿ ಅವಳ ಇನ್ನೊಬ್ಬ ಸ್ನೇಹಿತೆ ನಂದಿನಿಯ ಪರಿಚಯವಾಗಿತ್ತು. ಒಂದೇ ಅಲೆಯಳತೆಯ ಮನಸ್ಸುಗಳು ಬೇಗನೆ ಬೆರೆಯುತ್ತವೆಯಂತೆ. ನಂದಿನಿ ಮತ್ತು ಶಾರದಾ ಬೇಗನೇ ಸ್ನೇಹ ಬೆಳೆಸಿಕೊಂಡಿದ್ದರು. ನಂದಿನಿಗೆ ತನ್ನ ಹೊಸ ಗೆಳತಿ ಶಾರದಾಳ ನೋವನ್ನು ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಶಾರದಾಳನ್ನು ಸಂತೈಸಿದ ಅವಳು ಆ ಸಮಸ್ಯೆಗೆ ತಾನು ಪರಿಹಾರ ಒದಗಿಸುವುದಾಗಿ ಹೇಳಿದಳು. ನಗರದ ಹೊರವಲಯದಲ್ಲಿ ಆಶ್ರಮವೊಂದನ್ನು ಕಟ್ಟಿಕೊಂಡು ಜನರ ನಿಸ್ವಾರ್ಥ ಸೇವೆ ಮಾಡುತ್ತಿರುವ ಒಬ್ಬ ಮಹಾತ್ಮನಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯವೆಂದು ಹೇಳಿದಳು. ಅಷ್ಟೇ ಅಲ್ಲ, ತನ್ನ ನೆಂಟರಲ್ಲಿ ಒಬ್ಬ ಹೆಂಗಸು ಮದುವೆಯಾಗಿ ಆರು ವರ್ಷಗಳಾದರೂ ಮಕ್ಕಳ ಭಾಗ್ಯವಿಲ್ಲದೇ ಮರುಗುತ್ತಿದ್ದಾಗ ಆ ಸ್ವಾಮೀಜಿಯ ಸಲಹೆ ಪಡೆದು ಗರ್ಭ ಧರಿಸಿದ್ದಾಗಿ ಹೇಳಿದಳು. ಅದನ್ನು ಕೇಳಿದ ಶಾರದಾಳಿಗೆ ಆನಂದ ತಡೆಯಲಾಗಲಿಲ್ಲ. ಕಮರಿಹೋಗಿದ್ದ ಅವಳ ಕನಸೊಂದು ಮತ್ತೆ ಚಿಗುರಬಹುದಾಗಿತ್ತು. ಬಂಜೆತನದ ಹೆಣೆಪಟ್ಟಿ ಕಳಚುವುದಾದರೆ, ತಾನು ತಾಯಿಯಾಗುವುದು ಸಾಧ್ಯವಾಗುವುದಾದರೆ, ಗಂಡನ ಮನೆಯಲ್ಲಿ ಸಂತೋಷ ಮರಳುವುದಾದರೆ ಅವಳು ಯಾವ ಪೂಜೆಗೂ, ಯಾವ ವೃತಕ್ಕೂ, ಎಂಥ ತಪಸ್ಸಿಗೂ ಸಿದ್ಧವಾಗಿದ್ದಳು. ನಂದಿನಿ ಶಾರದಳನ್ನು ಆ ಸ್ವಾಮೀಜಿಯ ದರ್ಶನಕ್ಕೆ ಕರೆದುಕೊಂಡು ಹೋಗುವುದಾಗಿ ಮಾತು ಕೊಟ್ಟಳು. ಗಂಡನಿಗೂ, ಗಂಡನ ಮನೆಯವರಿಗೂ ಈ ವಿಷಯವನ್ನು ತಿಳಿಸ ಬಯಸದ ಶಾರದಾ ಗುಪ್ತವಾಗಿಯೇ ಸ್ವಾಮೀಜಿಯ ದರ್ಶನಕ್ಕಾಗಿ ಕಾಯತೊಡಗಿದಳು.

ಒಂದು ವಾರದ ನಂತರ ಶಾರದಾ ಮತ್ತು ನಂದಿನಿ ನಗರದ ದಕ್ಷಿಣದ ಅಂಚಿನಲ್ಲಿದ್ದ ಆಶ್ರಮಕ್ಕೆ ಹೊರಟರು. ಅದೊಂದು ಜನಸಂದಣಿಯಿಲ್ಲದ ನೀರವ ಪ್ರದೇಶ. ಊರು ಆ ದಿಕ್ಕಿನಲ್ಲಿ ಇನ್ನೂ ಬೆಳೆದಿರಲಿಲ್ಲ. ಎಲ್ಲಿ ನೋಡಿದರೂ ತಗ್ಗು ದಿನ್ನೆಗಳು, ಗಿಡಗಳು, ಮರಗಳು. ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಲುದಾರಿಗಳು. ನಂದಿನಿ ತನ್ನ ಹಳೆ ಕಾರಿನಿಲ್ಲಿ ಶಾರದಾಳನ್ನು ಕೂರಿಸಿಕೊಂಡು ಆಶ್ರಮದ ದಿಕ್ಕಿನಲ್ಲಿ ಸಾಗುತ್ತಿದ್ದಳು. ಕಾರಿನ ಕಿಟಕಿಯಿಂದ ಆಚೆ ನೋಡುತ್ತಿದ್ದ ಶಾರದಾಳಿಗೆ ಆ ಪ್ರದೇಶ ತೀರ ಅಪರಿಚಿತವೆನಿಸತೊಡಗಿತ್ತು. ಮನಸ್ಸಿನಲ್ಲಿ ಒಂದು ಚಿಕ್ಕ ದುಗುಡ ಆದರೆ ಅದು ಏನು ಅಂತ ಅವಳಿಗೇ ತಿಳಿದಿರಲಿಲ್ಲ. ನಂದಿನಿ ತನ್ನ ಜೊತೆಗೆ ಇರುವಾಗ ಅವಳು ಹೆದರಬೇಕೂ ಇರಲಿಲ್ಲ.

ಅವರ ಕಾರು ಎಷ್ಟು ತಿರುವುಗಳನ್ನು ದಾಟಿತ್ತೋ ಶಾರದಾಳಿಗೆ ಗೊತ್ತಿರಲಿಲ್ಲ. ಕೊನೆಗೂ ಅವರ ಎದುರಿಗೆ ಆಶ್ರಮವೊಂದು ಕಾಣಿಸಿತ್ತು. ತುಂಬಾ ಸೊಗಸಾದ ಆಶ್ರಮ. ಸುತ್ತಲೆಲ್ಲ ನಿಸರ್ಗದ ಹಸಿರು; ಹಣ್ಣುಗಳಿಂದ ತುಂಬಿದ ವಿವಿಧ ಗಿಡಮರಗಳು. ಅದು ಕಟ್ಟಿಗೆಯನ್ನು ಬಳಸಿ ಕಲಾತ್ಮಕವಾಗಿ ಕಟ್ಟಿದ್ದ ಆಶ್ರಮ. ಎದುರಿಗೆ ಹೊಂಡದಲ್ಲಿ ತೇಲುತ್ತ ವಿರಮಿಸುತ್ತಿದ್ದ ಸುಂದರವಾದ ಹಂಸಗಳು. ಕಾರಿನಿಂದ ಕೆಳಗಿಳಿದ ಶಾರದಾ ಸುತ್ತಲೂ ನೋಡಿದಳು. ಅದುವರೆಗೆ ಪ್ರಯಾಣದಿಂದ ಸ್ವಲ್ಪ ವ್ಯಾಕುಲಗೊಂಡಿದ್ದ ಅವಳ ಮನಸ್ಸಿಗೆ ಆಶ್ರಮದ ವಾತಾವರಣ ನೆಮ್ಮದಿ ತರುವಂತಿತ್ತು. ನಂದಿನಿ ಮತ್ತು ಶಾರದಾ ಆಶ್ರಮದ ಒಳಗೆ ಹೆಜ್ಜೆಯಿಡುತ್ತಿದ್ದಂತೆಯೇ ಮಧ್ಯ ವಯಸ್ಸಿನ ಒಬ್ಬ ಕಾವಿಧಾರಿ ಮಹಿಳೆ ಎದುರಾದಳು. ನಗುಮುಖದ ಆ ಮಹಿಳೆ ಅವರನ್ನು ಸ್ವಾಗತಿಸಿ ಮೂಲೆಯೊಂದರಲ್ಲಿರಿಸಿದ್ದ ಆಸನಗಳೆಡೆಗೆ ಕರೆದೊಯ್ದಳು. ಸ್ವಾಮೀಜಿ ಪೂಜೆಯಲ್ಲಿ ನಿರತರಾಗಿದ್ದಾರೆಂದೂ, ಸ್ವಲ್ಪ ಹೊತ್ತು ಕಾಯುವಂತೆಯೂ ಅವರಿಗೆ ಹೇಳಿ ಅವಳು ಹೊರಟು ಹೋದಳು. ಅರ್ಧ ಗಂಟೆಯ ನಂತರ ಕೊಣೆಯೊಂದರಿಂದ ಹೊರಗೆ ಬಂದ ಗಡ್ಡಧಾರಿ ವ್ಯಕ್ತಿಯನ್ನು ನೋಡುತ್ತಿದ್ದಂತೆಯೇ ನಂದಿನಿ ಎದ್ದು ನಿಂತಳು. ಮುಂದೆ ಹೋಗಿ ಅವನ ಚರಣ ಸ್ಪರ್ಷವನ್ನು ಮಾಡಿ ಶಾರದಾಳನ್ನು ಸನ್ನೆ ಮಾಡಿ ಕರೆದಳು. ತನ್ನೆದುರಿಗೆ ನಿಂತಿದ್ದ ಆ ವ್ಯಕ್ತಿಯೇ ಸ್ವಾಮೀಜಿಯೆಂದು ತಿಳಿದಾಗ ಶಾರದಾ ತಾನೂ ಮುಂದೆ ಹೋಗಿ ಬಾಗಿ ಅವನ ಪಾದಗಳನ್ನು ಸ್ಪರ್ಷಿಸಿದಳು. ನೋಡಲು ಮೂವತ್ತರ ಅಂಚಿನಲ್ಲಿದ್ದಂತೆ ಕಾಣುತ್ತಿದ್ದ ಸ್ವಾಮೀಜಿಯದು ಆಕರ್ಷಕ ಮೈಕಟ್ಟು. ಹೆಗಲ ಮೇಲೆ ಹರಡಿಕೊಂಡಿದ್ದ ಅವನ ಕೂದಲು, ಉದ್ದವಾಗಿ ಬೆಳೆದ ಅವನ ಗಡ್ಡ, ಧರಿಸಿದ್ದ ಶುದ್ಧವಾದ ಕಾವಿಬಟ್ಟೆಯ ಅವತಾರದಲ್ಲೂ ಸ್ವಾಮೀಜಿ ಒಬ್ಬ ಆಕರ್ಷಕ ಯುವಕನಂತಿದ್ದ. ತಾನು ಬಂದ ಉದ್ದೇಶವನ್ನು ಒಂದು ಕ್ಷಣ ಮರೆತ ಶಾರದಾ ಅವನ ರೂಪಕ್ಕೆ ಮರುಳಾದಂತಿದ್ದಳು.

ಮಂದಹಾಸದಿಂದ ಅವರನ್ನು ಸ್ವಾಗತಿಸಿದ ಸ್ವಾಮೀಜಿ ಅವರನ್ನು ಇನ್ನೊಂದು ಕೋಣೆಯೊಳಗೆ ಕರೆದೊಯ್ದು ತನ್ನನ್ನು ನೋಡಲು ಬಂದ ಉದ್ದೇಶವೇನೆಂದು ಕೇಳಿದ. ಶಾರದಾ ತನ್ನ ಸಮಸ್ಯೆಯನ್ನು ಅಳುಕಿನಿಂದಲೇ ವಿವರಿಸಿದರೆ ಸ್ವಾಮೀಜಿ ಏಕಾಗ್ರತೆಯಿಂದ ಅವಳ ಕಥೆಯನ್ನು ಕೇಳಿದ. ನಂತರ ಸ್ವಾಮೀಜಿ ಶಾರದಾಳಿಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಹೇಳಿದ. ಮೊದಲಿಗೆ ಸಾಧಾರಣವೆನಿಸಿದ ಪ್ರಶ್ನೆಗಳು ಕ್ರಮೇಣ ತುಂಬಾ ವೈಯಕ್ತಿಕವಾಗತೊಡಗಿದವು. ನಂದಿನಿಯ ಉಪಸ್ಥಿತಿಯಲ್ಲಿ ಆ ಪ್ರಶ್ನೆಗಳಿಗೆ ಉತ್ತರಿಸುವುದು ಶಾರದಾಳಿಗೆ ಕಷ್ಟವಾಗತೊಡಗಿತು. ಅದನ್ನು ಅರಿತ ಸ್ವಾಮೀಜಿ ನಂದಿನಿಗೆ ಸ್ವಲ್ಪ ಹೊತ್ತು ಪಕ್ಕದ ಕೋಣೆಯಲ್ಲಿ ಕುಳಿತಿರುವಂತೆ ಸೂಚಿಸಿದ. ನಂದಿನಿ ನಿರ್ಗಮಿಸಿದ ನಂತರ ಶಾರದಾ ಆ ಪ್ರಶ್ನೆಗಳಿಗೆ ಒಲ್ಲದ ಮನಸ್ಸಿನಿಂದಲೇ ಉತ್ತರಿಸತೊಡಗಿದಳು. ತಲೆ ತಗ್ಗಿಸಿ, ನಾಚುತ್ತಲೇ ಮಾತನಾಡಿದ ಶಾರದಾ ತಾನು ತನ್ನ ಗಂಡನೊಂದಿಗೆ ವಾರಕ್ಕೆ ಎಷ್ಟು ಬಾರಿ ರತಿಕ್ರೀಡೆ ನಡೆಸುವುದಾಗಿ ಹೇಳಿದ್ದಲ್ಲದೇ, ತನ್ನ ಗಂಡನ ವೀರ್ಯದ ಪ್ರಮಾಣ ಎಷ್ಟು, ಆತ ಸ್ಖಲಿಸಲು ತೆಗೆದುಕೊಳ್ಳುವ ಸಮಯವೆಷ್ಟು, ಅವನೊಂದಿಗೆ ಸಂಭೋಗಿಸಿದಾಗ ತನಗೆ ಸಿಗುವ ತೃಪ್ತಿ ಎಷ್ಟು ಇತ್ಯಾದ ಪ್ರಶ್ನೆಗಳಿಗೆ ಉತ್ತರಿಸಿದಳು. ನಂತರ ಅವಳ ಜನ್ಮ ದಿನ, ಜನನ ಸಮಯ, ನಕ್ಷತ್ರ, ರಾಶಿ, ಜನ್ಮ ಸ್ಥಳ ಮುಂತಾದವುಗಳನ್ನು ಪರಿಶೀಲಿಸಿದ ಸ್ವಾಮೀಜಿ ಜ್ಯೋತಿಷ್ಯ ಶಾಸ್ತ್ರದ ಪಂಚಾಂಗವೊಂದನ್ನು ತೆರೆದಿಟ್ಟು ಕೆಲವು ಲೆಕ್ಕಾಚಾರಗಳನ್ನು ಮಾಡಿ ಅವಳ ಸಮಸ್ಯೆಗೆ ಪರಿಹಾರ ಸಾಧ್ಯವಿದೆಯೆಂದು ಹೇಳಿದ. ಶಾರದಾಳಿಗೆ ತುಂಬಾ ಸಂತೋಷವಾಯಿತು. ಅದಕ್ಕಾಗಿ ತಾನು ಏನೇನು ಮಾಡಬೇಕೆಂದು ಕೇಳಿದ ಅವಳಿಗೆ ಸ್ವಾಮೀಜಿ ಒಂದು ಪೂಜೆಯನ್ನು ಸೂಚಿಸಿ ವಿವರಿಸಿದ. ಈ ಪೂಜೆ ಎಂಟು ವಾರಗಳಲ್ಲಿ ನಿಗದಿತ ಕೆಲವು ದಿನಗಳಲ್ಲಿ ನೆರವೇರಬೇಕೆಂದೂ, ಅವಳು ಮಧ್ಯೆ ಯಾವ ಕಾರಣಕ್ಕೂ ಅದನ್ನು ಕೈಬಿಡಕೂಡದೆಂದೂ, ಆ ವೃತವು ಮುಗಿಯುವವರೆಗೆ ತಾನು ಕೊಡಲಿರುವ ಒಂದು ತಾಯಿತವನ್ನು ಅವಳು ತಪ್ಪದೇ ಧರಿಸಬೇಕೆಂದೂ ಹೇಳಿದ. ಅಲ್ಲದೇ ಇಂದಿಗೆ ಸರಿಯಾಗಿ ಏಳನೇ ದಿನಕ್ಕೆ ತಾನು ಈ ಪೂಜೆಯನ್ನು ಅವಳಿಗಾಗಿ ಪ್ರಾರಂಭಿಸುವನೆಂದೂ, ಸೂರ್ಯಾಸ್ತದ ನಂತರ ನಡೆಯುವ ಅನುಷ್ಠಾನಕ್ಕಾಗಿ ಅವಳು ಆ ದಿನ ಆಶ್ರಮಕ್ಕೆ ಬರಬೇಕೆಂದೂ ಮತ್ತು ಈ ವೃತವು ಸಂಪೂರ್ಣವಾಗುವವರೆಗೆ ಅವಳು ತನ್ನ ಗಂಡನೊಡನೆ ಸಂಭೋಗ ನಡೆಸಕೂಡದೆಂದೂ ಹೇಳಿದನು. ಎಲ್ಲವನ್ನೂ ಕೇಳಿಸಿಕೊಂಡ ನಂತರ ಶಾರದಾ ತಾನು ಈ ವೃತವನ್ನು ನಿಷ್ಠೆಯಿಂದ ಪೂರೈಸುವುದಾಗಿ ಸ್ವಾಮೀಜಿಗೆ ಆಶ್ವಾಸನೆ ಕೊಟ್ಟಳು. ಸ್ವಾಮೀಜಿ ಮಂತ್ರಿಸಿ ಕೊಟ್ಟ ತಾಯಿತವನ್ನು ಪಡೆದು, ಅವನ ಕಾಲು ಮುಟ್ಟಿ ನಮಸ್ಕರಿಸಿದಳು. ಸ್ವಾಮೀಜಿ ಅವಳ ಐದುನೂರು ರೂಪಾಯಿಗಳ ದಕ್ಷಿಣೆಯನ್ನು ಪಡೆಯಲು ನಿರಾಕರಿಸಿ ತಾನು ಮಾಡುತ್ತಿರುವುದು ಕೇವಲ ಜನಸೇವೆಯೆಂದೂ, ದುಡ್ಡಿನ ಆಸೆ ತನಗಿಲ್ಲವೆಂದೂ ಹೇಳಿ ಅವಳನ್ನು ಆಶೀರ್ವದಿಸಿ ಕಳುಹಿಸಿದನು. ಶಾರದಾಳಿಗೆ ಅವನ ಮೇಲಿನ ಭಕ್ತಿ ಮತ್ತು ವಿಶ್ವಾಸಗಳು ಇಮ್ಮಡಿಯಾಗಿದ್ದವು.


ಮುಂದಿನ ಭಾಗವನ್ನು ಇಲ್ಲಿ ಓದಬಹುದು

3 comments:

rajkar said...

ಕತೆ ಚೆನ್ನಗಿ ಮೂಡಿಬರುತ್ತಿದೆ ದಯವಿಟ್ಟು ಮುಂದುವರೆಸಿ.

SANTHUBANI said...

kate tumba channagide

Billa said...

nimma ee swamiji kathe thumba channagide idu namma olage thumaba samaya nedeyuthiruvantha nija jeevanakke hathhiravaadfa kathe i liked it padminiyavare

Post a Comment